🔥 TRENDING வேலூரில் 601 கிலோ லட்டு விநாயகர் சதுர்... एचपीसीएल पाइपलाइन से खेल चोरी की कोशिश... Arunachal Governor Urges Innovation an... Arunachal Scientists Launch In‑Depth S... Speaker Rather calls for balanced cove... LoP Sharma Blames Government for Using...
16 Sep 2026
ગુજરાતી मराठी ਪੰਜਾਬੀ বাংলা

ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ: ಕುಡಿಯುವ ನೀರಿಗಾಗಿ ಮಹಿಳೆಯರ ಆಕ್ರೋಶ

✍️ Reporter: ಮಂಜುನಾಥ ಹೂಡೇಂ 🗓 16 Sep 2026, 08:20 PM 👁 7
Share: 💬 WhatsApp 📘 Facebook 𝕏 Post

ಮಕ್ಕಳ ಮೈ ತೊಳೆಯಲೂ ನೀರಿಲ್ಲ; ಸಮಸ್ಯೆ ಬಗೆಹರಿಸದಿದ್ದರೆ ಆಮರಣಾಂತ ಉಪವಾಸ

ಕೂಡ್ಲಿಗಿ: ತಾಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಮಕ್ಕಳ ಮೈ ತೊಳೆಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಮಹಿಳೆಯರು ಹಾಗೂ ಸಾರ್ವಜನಿಕರು ಬುಧವಾರ ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಕುರುಬರ ಏರಿಯಾ ಹಾಗೂ ಓಬಳದೇವರ ದೇವಸ್ಥಾನದ ಸುತ್ತಮುತ್ತಲಿನ ಸುಮಾರು 40–50 ಮನೆಗಳಿಗೆ ನಳದ ಮೂಲಕ ನೀರು ಸರಬರಾಜಾಗದೆ ಹಲವು ದಿನಗಳಿಂದ ಸಮಸ್ಯೆ ಎದುರಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ನೀರುಗಂಟಿ ಇಲ್ಲದ ಕಾರಣ ನಿಗದಿತ ಸಮಯಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಹಾಗೂ ಮಕ್ಕಳು ದೂರದ ಹೊಲ-ಗದ್ದೆಗಳಿಗೆ ತೆರಳಿ ನೀರು ತರುವಂತಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ತೆರಳುವುದನ್ನು ಬಿಟ್ಟು ದಿನದ ಬಹುಪಾಲು ಸಮಯ ನೀರು ಸಂಗ್ರಹಿಸುವುದರಲ್ಲೇ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ:* ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗದೆ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಲ್ಲ ಎಂದು ದೂರಿದರು.
ಇದರೊಂದಿಗೆ ವಿಬಿಜಿ ರಾಮ್‌ಜಿ ಯೋಜನೆಯಡಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪವೂ ಪ್ರತಿಭಟನೆಯಲ್ಲಿ ಕೇಳಿಬಂತು. “ಗ್ರಾಮದ ಮೂಲಭೂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಇಂತಹ ಗ್ರಾಪಂ ನಮಗೆ ಬೇಕೇ?” ಎಂದು ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿದರು.

*ಹೊಸ ಪೈಪ್‌ಲೈನ್ ಅಳವಡಿಸಲು ಆಗ್ರಹ:* ಕುಡಿಯುವ ನೀರು ಸರಬರಾಜಾಗದ ಪ್ರದೇಶಗಳಿಗೆ ಹೊಸ ಪೈಪ್‌ಲೈನ್ ಅಳವಡಿಸಿ, ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣ ದುರಸ್ತಿಪಡಿಸಿ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶೀಘ್ರವಾಗಿ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಹನುಮಕ್ಕ, ಸುನಿತಾ, ನೀಲಮ್ಮ, ಮಂಜಕ್ಕ, ಲಕ್ಷ್ಮೀದೇವಿ, ಶ್ರೀನಿಧಿ, ಸುಜಾತಾ, ಓಬಕ್ಕ, ಪದ್ದಮ್ಮ, ಅಂಜಿನಮ್ಮ, ಪಾಪಮ್ಮ, ಕುರುಬರ ಗಂಗಮ್ಮ, ವಿಶಾಲಾಕ್ಷಿ, ನಾಗವೇಣಿ, ಸೂರಮ್ಮ, ನಿಂಗಮ್ಮ, ಕುಂಬಾರ ಗಂಗಮ್ಮ, ಗೌರಮ್ಮ, ನಾಗಮ್ಮ, ರಮೇಶ್, ಬಸವರಾಜ, ಪಿ.ಎಂ. ಸಿದ್ಧಲಿಂಗಸ್ವಾಮಿ, ನಾಗರಾಜ, ಪ್ರಸನ್ನ, ಶ್ರೀನಿವಾಸ್, ಗಿರೀಶ್, ರೇವಣ್ಣ, ಕರಿಬಸಪ್ಪ, ದೇವರಾಜ, ಶ್ರೀಧರ್, ಸಚಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
📲Get App